ಭಗದತ್ತ
	ನರಕಾಸುರನ ಮಗ. ಅಪ್ರತಿಮವೀರ. ಪ್ರಾಗ್‍ಜ್ಯೋತಿಷಪುರದ ರಾಜ, ಪಾಂಡವರ ರಾಜಸೂಯಯಾಗ ಸಂದರ್ಭದಲ್ಲಿ ಅರ್ಜುನನ್ನು ಎದುರಿಸಿ ಸೋತು ಕಪ್ಪ ಸಲ್ಲಿಸಿದ ಈತ ಭಾರತ ಯುದ್ಧದಲ್ಲಿ ದುರ್ಯೊಧನನ ಪರವಾಗಿ ಹೋರಾಡಿದ. ದ್ರೋಣನ ಸೇನಾಪತ್ಯದಲ್ಲಿ ಯುದ್ಧ ನಡೆಯುವಾಗ ಈತ ಸುಪ್ರತೀಕವೆಂಬ ಆನೆಯನ್ನು ಭೀಮಸೇನನ ಮೇಲೆ ಬಿಟ್ಟಾಗ ಈ ರಣಭಯಂಕರ ಆನೆಯನ್ನು ತಡೆಯಲು ದೂರದಲ್ಲಿ ಸಂಶಪ್ತಕರೊಡನೆ ಯುದ್ಧ ಮಾಡುತ್ತಿದ್ದ ಅರ್ಜುನನೇ ಬರಬೇಕಾಯಿತು. ಕೃಷ್ಣಾರ್ಜುನರಿಗೆ ಮಾತ್ರ ಅವನನ್ನು ಗೆಲ್ಲಲು ಸಾಧ್ಯವಿತ್ತು. ಭೀಮನ ಸಹಾಯಕ್ಕೆ ಅರ್ಜುನ ಬಂದಾಗ ಭಗದತ್ತ ಆನೆಯನ್ನು ಅರ್ಜುನನ ಕಡೆ ತಿರುಗಿಸಿದ. ಈತ ವೈಷ್ಣವಾಸ್ತ್ರವನ್ನು ಅರ್ಜುನನ ಮೇಲೆ ಪ್ರಯೋಗಿಸಿದಾಗ ಕೃಷ್ಣ ಅದರಿಂದ ಅರ್ಜುನನ್ನು ಉಳಿಸಿ. ಮಹಾಸ್ತ್ರ ಕಳೆದುಕೊಂಡು ಬರಿಗೈಯಾದ ಭಗದತ್ತನನ್ನು ಕೊಲ್ಲುವಂತೆ ಸಲಹೆ ಮಾಡಿದ. ಮಹಾಭಾರತದ ಹನ್ನೆರಡು ದಿನದ ಯುದ್ಧದಲ್ಲಿ ಅರ್ಜುನ ಭಗದತ್ತನನ್ನು ಕೊಂದ. ಇವನಿಗೆ ಕೃತಪ್ರಜ್ಞ, ವಜ್ರದತ್ತರೆಂಬ ಇಬ್ಬರು ಮಕ್ಕಳಿದ್ದರು. ಕೃತಪ್ರಜ್ಞ ಹದಿನೈದನೆಯ ದಿನದ ಯುದ್ಧದಲ್ಲಿ ನಕುಲನಿಂದ ಮಡಿದ.
(ಎ.ಟಿ.ಡಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ